Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಕರ್ನಾಟಕ ವಿಧಾನಸಭೆ ಚುನಾವಣೆ ಕಣ ರಂಗೇರಿದಂತೆ, ಮತ ಕೇಳಲು ಹೋದ ಸಿಎಂ ಬೊಮ್ಮಾಯಿಗೆ ಥಳಿತ, ಪ್ರಚಾರದ ವೇಳೆ ಡಿಕೆಶಿ ತೂರಾಟ ಎನ್ನುವಂತಹ ಕ್ಲೇಮುಗಳು ಸೇರಿದಂತೆ ವಿವಿಧ ಸುಳ್ಳು ಕ್ಲೇಮುಗಳು ವ್ಯಾಪಕವಾಗಿ ಹರಿದಾಡಿದ್ದವು. ಮತದಾನಕ್ಕೆ ಮೊದಲು ಮತ ಕೇಳಲು ಹೋಗಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೇ ಥಳಿಸಲಾಗಿತ್ತು ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪ್ರಮುಖ ಸುದ್ದಿಯಾಗಿದೆ. ಇದರೊಂದಿಗೆ ಬಿಜೆಪಿ ಮುಖಂಡನ ಕಾರಿನಲ್ಲೇ ಮತಯಂತ್ರ ಸಿಕ್ಕಿದ್ದು, ಅದನ್ನು ಗ್ರಾಮಸ್ಥರು ಒಡೆದು ಹಾಕಿದ್ದಾರೆ ಎಂದು ಹೇಳಲಾಗಿತ್ತು. ಉಳಿದಂತೆ ಕಾಂಗ್ರೆಸ್ಗೆ ಮತ ಹಾಕಬೇಡಿ ಎಂದು ನಟ ಪ್ರಕಾಶ್ ರಾಜ್ ಮಾಡಿದ್ದ ವೀಡಿಯೋ, ಕಾರಿನ ಟಯರಿನಲ್ಲಿ ಸಿಕ್ಕಿದ ಕಂತೆ ಕಂತೆ ಹಣದ ವೀಡಿಯೋಗಳು ತಪ್ಪು ಕ್ಲೇಮಿನೊಂದಿಗೆ ವೈರಲ್ ಆಗಿದ್ದವು.

ಚುನಾವಣಾ ಪ್ರಚಾರದ ವೇಳೆ ಮತ ಕೇಳಲು ಹೋದಾಗ ಕರ್ನಾಟಕ ಸಿಎಂ ಬೊಮ್ಮಾಯಿ ಅವರಿಗೆ ಚಪ್ಪಲಿಯಿಂದ ಥಳಿಸಲಾಯಿತು ಮತ್ತು ಯಾವುದೇ ಸುದ್ದಿ ಚಾನೆಲ್ ಗಳು ಇದನ್ನು ಇನ್ನೂ ತೋರಿಸಿಲ್ಲ. “ಈ ವೀಡಿಯೋವನ್ನು ವೀಕ್ಷಿಸಿ” ಎಂಬ ಶೀರ್ಷಿಕೆ ಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಚುನಾವಣೆ ಮೊದಲು ಪ್ರಸಾರವಾದ ಈ ವೈರಲ್ ವೀಡಿಯೋ, ಬಿಜೆಪಿ ವಿರುದ್ಧ ವ್ಯಾಪಕ ಆಕ್ರೋಶವಿದೆ ಎಂಬುದನ್ನು ತೋರಿಸಲು ಬಳಕೆಯಾಗಿದೆ. ಈ ಕ್ಲೇಮಿನ ಕುರಿತು ಸತ್ಯಶೋಧನೆ ನಡೆಸಿದಾಗ ಮತ ಕೇಳಲು ಹೋದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಥಳಿಸಲಾಯಿತು ಎನ್ನುವುದು ತಪ್ಪು ಎಂದು ತಿಳಿದುಬಂದಿದೆ. ಬದಲಾಗಿ 2018ರಲ್ಲಿ ಬೆಳೆ ವಿಮೆ ಮುಂತಾದ ರೈತರ ಬೇಡಿಕೆಗಳನ್ನು ಇಟ್ಟುಕೊಂಡು ನಡೆದ ಪ್ರತಿಭಟನೆ ಸಮಯದ್ದು ಮತ್ತು ಆಗ ಕೋಲೊಂದು ಬೊಮ್ಮಾಯಿ ಅವರಿಗೆ ತಾಗಿತ್ತು ಎಂದು ತಿಳಿದುಬದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ.

ಕರ್ನಾಟಕ ಚುನಾವಣೆಯ ಮತದಾನ ಸಂದರ್ಭದಲ್ಲಿ ಬಿಜೆಪಿ ನಾಯಕನ ವಾಹನದಲ್ಲಿ ಇವಿಎಂ ಯಂತ್ರ ಸಿಕ್ಕಿದಾಗ ಸ್ಥಳೀಯರು ಗಲಾಟೆ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಕಾರಿನಲ್ಲಿ ಮತಯಂತ್ರ ಸಿಕ್ಕಿದಾಗ ಸ್ಥಳೀಯರು ಅದನ್ನು ತಡೆದು ಒಡೆದು ಹಾಕಿದ್ದಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದಾಗ, ಮೇ 10ರಂದು ಮತದಾನದ ವೇಳೆ ಹೆಚ್ಚುವರಿ ಮತಯಂತ್ರಗಳನ್ನು ಅಧಿಕಾರಿಗಳು ಸಾಗಿಸುತ್ತಿರುವ ವೇಳೆ ತಪ್ಪಾಗಿ ತಿಳಿದ ಗ್ರಾಮಸ್ಥರು ಮತಯಂತ್ರಗಳನ್ನು ಪುಡಿಗೈದು ಅಧಿಕಾರಿಗಳಿಗೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ವಿಜಯಪುರ ಬಸವನಬಾಗೇವಾಡಿಯ ಮಸಬಿನಾಳ ಗ್ರಾಮದ್ದು ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ

ವಿಧಾನಸಭಾ ಚುನಾವಣೆ ಮತದಾನಕ್ಕೆ ಮುಂಚಿತವಾಗಿ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ತೂರಾಡಿಕೊಂಡು ನಡೆಯುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಚುನಾವಣೆ ಸಂದರ್ಭ “ಮನೆ ಮನೆ ಪ್ರಚಾರ” ಮಾಡುವಾಗ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರು ಪಾನಮತ್ತರಾದ ಸ್ಥಿತಿಯಲ್ಲಿರುವುದನ್ನು ಇದು ತೋರಿಸುತ್ತದೆ ಎಂದು ವೀಡಿಯೋ ಹಂಚಿಕೊಂಡವರು ಆರೋಪಿದ್ದರು. ಸತ್ಯಶೋಧನೆ ವೇಳೆ ಈ ವೀಡಿಯೋ ಈಗಿನ ಚುನಾವಣೆ ಸಂದರ್ಭದ್ದಲ್ಲ ಎಂದು ತಿಳಿದುಬಂದಿದೆ. ಈ ವೀಡಿಯೋ 1 ವರ್ಷ ಹಳೆಯದಾಗಿದ್ದು, ಕಾಂಗ್ರೆಸ್ ಆಯೋಜಿಸಿದ್ದ ಮೇಕೆದಾಟು ಪಾದಯಾತ್ರೆ ಸಂದರ್ಭದ್ದಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ

ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ಗೆ ಮತ ಹಾಕುವಂತೆ ಪಾಕಿಸ್ಥಾನ ಪ್ರಧಾನಿ ಶೆಹಬಾಜ್ ಶರೀಫ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ ಎಂದು ಹೇಳಲಾಗಿತ್ತು. 2047ರ ಒಳಗೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಬೇಕು, ಅದಕ್ಕಾಗಿ ನಿಷೇಧಿತ ಪಿಎಫ್ಐ ಮರುಸ್ಥಾಪಿಸಬೇಕು. ಕಾಂಗ್ರೆಸ್ ಮಾತ್ರ ನಿಷೇಧ ವಾಪಸ್ ಪಡೆಯುತ್ತದೆ. ಅದಕ್ಕಾಗಿ ಕಾಂಗ್ರೆಸ್ ಗೆ ಮತ ಹಾಕಬೇಕೆಂದು ಮನವಿ ಮಾಡಿದ್ದಾರೆ ಎನ್ನಲಾಗಿತ್ತು. ಸತ್ಯಶೋಧನೆಯಲ್ಲಿ ಇದೊಂದು ನಕಲಿ ಟ್ವೀಟ್ ಎಂದು ಗೊತ್ತಾಗಿದೆ. ಪಾಕ್ ಪ್ರಧಾನಿ ಹೀಗೆ ಟ್ವೀಟ್ ಮಾಡಿರುವುದು ಪತ್ತೆಯಾಗಿರುವುದಿಲ್ಲ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ

ಕನ್ನಡದ ಮೇರು ನಟ ಪ್ರಕಾಶ್ ರಾಜ್ ಅವರು ಕಾಂಗ್ರೆಸ್ಗೆ ಮತ ನೀಡದಂತೆ ಮನವಿ ಮಾಡಿದ್ದಾರೆ ಎಂದು ಸಂದೇಶವೊಂದು ಟ್ವೀಟರ್ನಲ್ಲಿ ಹರಿದಾಡಿದೆ. ಸತ್ಯಶೋಧನೆಯ ಪ್ರಕಾರ, ಇದು 2019ರ ಲೋಕಸಭೆ ಚುನಾವಣೆ ಸಂದರ್ಭದ್ದಾಗಿದ್ದು, ಸ್ವತಂತ್ರ್ಯ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತ ಪ್ರಕಾಶ್ ರಾಜ್ ಅವರು ತಮ್ಮ ವಿರುದ್ಧ ಹರಿದಾಡಿದ ವಾಟ್ಸಾಪ್ ಸಂದೇಶಕ್ಕೆ ನೀಡಿದ ಪ್ರತಿಕ್ರಿಯೆ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
Runjay Kumar
May 9, 2024
Ishwarachandra B G
September 9, 2023
Vasudha Beri
May 9, 2023